ಗೋವು ಕಳ್ಳರು ಇನ್ನು ಕೂಡ ಬುದ್ಧಿಕಲಿಯದಿದ್ದರೆ ನಡುರಸ್ತೆಯಲ್ಲಿ ಗುಂಡೇಟು: ಸಚಿವ ವೈದ್ಯ ಎಚ್ಚರಿಕೆ

ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗೋ ಹತ್ಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸಚಿವರು

ಕಾರವಾರ: ಗೋವು ಕಳವು ಮಾಡುವ ಘಟನೆ ಉತ್ತರ ಕನ್ನಡದಲ್ಲಿ ಮತ್ತೆ ನಡೆದರೆ ಆರೋಪಿಗಳಿಗೆ ನಡು ರಸ್ತೆಯಲ್ಲಿ ಗುಂಡೇಟು ನೀಡಲು ಆದೇಶಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.

ಇಲ್ಲಿ ಸೋಮವಾರ ಕೆಡಿಪಿ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೋವು ಕಳವು ಪ್ರಕರಣಗಳು ಜಿಲ್ಲೆಯಲ್ಲಿ ಹಲವು ವರ್ಷದಿಂದ ನಡೆಯುತ್ತಿದೆ. ಅದನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಗೋವು ಕಳವು ಮಾಡಿದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲೂ ಗೋವು ಕಳವು ನಡೆದಿದೆ. ಕುಮಟಾ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಟೀಕಿಸುತ್ತಿದ್ದಾರೆ. ಅವರ ಸರ್ಕಾರದ ಅವಧಿಯಲ್ಲಿ ಕ್ರಮ ಇರಲಿಲ್ಲ. ನಾವು ಮುಲಾಜಿಲ್ಲದೆ ಕ್ರಮ ಜರುಗಿಸಿದ್ದೇವೆ ಎಂದರು.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ನಮ್ಮದೇ ಪಕ್ಷದ ಶಾಸಕರಂತೆ. ಜಿಲ್ಲೆಯ ಅಭಿವೃದ್ಧಿಗೆ ಅವರು ಬೆಂಬಲಿಸಿ, ಕೆಲಸ ಮಾಡುತ್ತಿದ್ದಾರೆ. ಕುಮಟಾದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಅಲ್ಲಿ ಪಕ್ಷದ ಕಾರ್ಯಕರ್ತರ ನೆರವಿನಿಂದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

WhatsApp
Facebook
Telegram
error: Content is protected !!
Scroll to Top