ಭಟ್ಕಳ : ಠಾಣೆಯ ಕರ್ತವ್ಯ ಮುಗಿಸಿ ಮನೆಗೆ ಮರಳುತಿದ್ದ ಮೂವರು ಪೊಲೀಸರ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಸ್ ಹಾಯಿಸಿದ ಪರಿಣಾಮ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಭಟ್ಕಳದಲ್ಲಿ ನಡೆದಿದೆ.
ಜೂ 21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ ಗುಡ್ಡಪ್ಪ, ಕಿರಣಕುಮಾರ ಜಿ ನಾಯ್ಕ, ಸುರೇಶ ಪಟಗಾರ ಎಂಬುವವರು ಸಾಗರ ರೋಡ್ ಬಳಿಯ ಪೊಲೀಸ್ ಕ್ವಾಟರ್ಸ ಬಳಿಯ ಕಚ್ಚಾರಸ್ತೆ ಅಂಚಿನಲ್ಲಿ ಮಾತನಾಡುತ್ತ ನಿಂತಿದ್ದರು.
ಆಗ, ಅಡ್ಡಾದಿಡ್ಡಿಯಾಗಿ ಕೆಎಸ್ಆರ್ಟಿಸಿ ಬಸ್ ಚಲಾಯಿಸಿಕೊಂಡು ಬಂದ ಬೀಮಣ್ಣ ಜಗ್ಗಲ್ಲವರ್ ಎಂಬಾತ ಬಸ್ ಗುದ್ದಿಸಿ ಪರಾರಿಯಾಗಿದ್ದಾನೆ.
ಬಸ್ ಡಿಕ್ಕಿ ಆಗಿದ್ದರಿಂದ ಪೊಲೀಸ್ ಸಿಬ್ಬಂದಿ ಕಿರಣಕುಮಾರ ಜಿ ನಾಯ್ಕ ಹಾಗೂ ಸುರೇಶ ಪಟಗಾರ ಗಾಯಗೊಂಡಿದ್ದಾರೆ. ಈ ಇಬ್ಬರಿಗೂ ಹೊಟ್ಟೆ, ಕಾಲು, ಹಣೆ, ಬುಜಕ್ಕೆ ಭಾರೀ ಪ್ರಮಾಣದಲ್ಲಿ ಗಾಯವಾಗಿದೆ. ಕೃಷ್ಣ ಗುಡ್ಡಪ್ಪ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಇದಾದ ನಂತರ ಚಾಲಕ ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸದೇ ಮುಂದೆ ಹೋಗಿದ್ದು, ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧಪಟ್ಟಂತೆ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.