ಭಟ್ಕಳದಲ್ಲಿ ತ್ಯಾಗ ಬಲಿದಾನಸ ಸಂಕೇತವಾದ ಪವಿತ್ರ ಬಕ್ರಿದ್ ಆಚರಣೆ

ಭಟ್ಕಳ :ತ್ಯಾಗ, ಬಲಿದಾನದ ಸಂಕೇತವಾದ ಇಸ್ಲಾಮ್ ಧರ್ಮೀಯರ ಪವಿತ್ರ ಬಕ್ರೀದ್ ಹಬ್ಬದ ಆಚರಣೆಗೆ ಭಟ್ಕಳ ತಾಲೂಕಿನಾದ್ಯಂದ ಪ್ರಾರ್ಥನೆಯೊಂದಿಗೆ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ ನಿಮಿತ್ತ ಈದಗಾ ಮೈದಾನದಲ್ಲಿ ಪ್ರಾರ್ಥನೆ ಚಿಂತನೆಯನ್ನು ಕೈ ಬಿಟ್ಟು, ಭಟ್ಕಳದ ಸರಿಸುಮಾರು ೨೦ ಜುಮ್ಮಾ ಮಸೀದಿಗಳಲ್ಲಿ ಏರ್ಪಾಡು ಮಾಡಲಾಗಿತ್ತು. ಶ್ವೇತ ವಸ್ತ್ರಧಾರಿಗಳಾಗಿ ಸೋಮವಾರ ಬೆಳಿಗ್ಗೆ ೭ ಗಂಟೆಯ ಸುಮಾರಿಗೆ ಮಸೀದಿಗೆ ತೆರಳಿದ ಸಾವಿರಾರು ಮುಸ್ಲೀಮ್ ಧರ್ಮೀಯರು ವಿಶೇ? ಪ್ರಾರ್ಥನೆ ಸಲ್ಲಿಸಿದರು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂತಸವನ್ನು ವಿನಿಯಮ ಮಾಡಿಕೊಳ್ಳಲಾಯಿತು. ಭಟ್ಕಳದ ಜಾಮೀಯಾ ಮೊಹಲ್ಲಾದ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಅಲೀಮ್ ಖತೀಬ್, ಖಲೀಫಾ ಜಾಮೀಯಾ ಮಸೀದಿಯಲ್ಲಿ ಮೌಲಾನಾ ಖಾಜಾ ಮೊಯ್ನುದ್ದೀನ್, ಮಗ್ದೂಮ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ನಿಯಾಮತುಲ್ಲಾ ಆಸ್ಕೇರಿ ನದ್ವಿ, ತಂಜೀಮ್ ಮಿಲ್ಲಾ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅನ್ಸಾರ್ ಖತೀಬ್ ಮದನಿ, ಮದೀನಾ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಝಕರಿಯಾ ಬರ್ಮಾವರ್ ನದ್ವಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ ನೂರ್ ಜಾಮಿಯಾ ಮಸೀದಿಯ ಮೌಲಾನಾ ಅಬ್ದುಲ್ ನೂರ್ ನದ್ವಿ ಧಾರ್ಮಿಕ ಪ್ರವಚನ ನೀಡಿ, ದಾನ, ಧರ್ಮಗಳು ಕೇವಲ ಭೌತಿಕ ಚಟುವಟಿಕೆಗಳಾಗಿರದೇ ಮನಸ್ಸು, ಭಾವನೆಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕೆ ಇಸ್ಲಾಮ್‌ನಲ್ಲಿ ಅವಕಾಶ ಇಲ್ಲ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯನ್ನು ಪಾಲಕರು ಹೊತ್ತುಕೊಳ್ಳಬೇಕು. ಸಮುದಾಯವನ್ನು ಒಳ್ಳೆಯ ಮಾರ್ಗದತ್ತ ಕೊಂಡೊಯ್ಯುವ ಕೆಲಸವನ್ನು ಮುಖಂಡರಾದವರು ಮಾಡಬೇಕು ಎಂದು ವಿವರಿಸಿದರು.

ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದವರೆಗೂ ಭಟ್ಕಳದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಮುಸ್ಲೀಮ್ ಬಾಹುಳ್ಯವನ್ನು ಹೊಂದಿರುವ ಭಟ್ಕಳ ಪಟ್ಟಣ ಪ್ರದೇಶದಲ್ಲಿ ಹೆಚ್ಚಿನ ಅಂಗಡಿಗಳನ್ನು ಮುಚ್ಚಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಶಾಂತಿ ಭಂಗವಾಗದಂತೆ ಎಚ್ಚರ ವಹಿಸಲಾಗಿತ್ತು. ತಾಲೂಕಿನ ಎಲ್ಲೆಡೆ ಡಿವಾಯ್‌ಎಸ್ಪಿ ಮಹೇಶ, ಸಿಪಿಐ ಗೋಪಾಲಕೃ?, ಸಿಪಿಐ ಚಂದನ್ ಮಾರ್ಗದರ್ಶನದಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಬಕ್ರೀದ್ ಹಿನ್ನೆಲೆಯಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಕುರಿಗಳ ಮಾರಾಟ ಜೋರಾಗಿ ನಡೆಯುತ್ತಿರುವುದು ಕಂಡು ಬಂದಿದೆ. ಅಕ್ಕಪಕ್ಕದ ತಾಲೂಕುಗಳ ನೂರಾರು ಜನರು ಕುರಿ ಖರೀದಿಗಾಗಿಯೇ ಭಟ್ಕಳದತ್ತ ಮುಖ ಮಾಡಿದ್ದಾರೆ.

WhatsApp
Facebook
Telegram
error: Content is protected !!
Scroll to Top